ಕಳೆದುದು ಸಿಕ್ಕಿದೆ… May 10, 2008
Posted by magiccaarpet in dailogue.add a comment
ನಮಸ್ತೇ,
ಪರಮೇಶ್ವರ ಗುರುಸ್ವಾಮಿಯವರೇ,
ನಾನು ಶರಣಾಗಿಬಿಟ್ಟೆ. ಮತ್ತೆ ಮಾತೇ ಇಲ್ಲ! ಇನ್ನೂ ಸುಧಾರಿಸ್ಕೊಳ್ತಿದೇನೆ…
ಹೀಗೆ ಅರೆಬರೆ ಡೀಟೇಲ್ ಕೊಟ್ಟು ಗೂಗಲ್ ಸರ್ಚಿನಲ್ಲಿ ಹುಡುಕಿದರೂ ಕೂಡ ಇಷ್ಟು ಥಟ್ ಅಂತ ಉತ್ತರ ಸಿಗ್ತಿರಲಿಲ್ವೇನೋ? ಮೋಹನ್ ಗೋಖಲೆ, ಸ್ಮಿತಾ ಪಾಟೀಲ್… ಇವರ ಮುಖಗಳೆಲ್ಲ ಅಸ್ಪಷ್ಟ ನೆನಪಿತ್ತು… ಆ ವಯಸ್ಸಿನಲ್ಲಿ (೧೨-೧೩) ಈ ಸಿನೆಮಾ ನನ್ನನ್ನ ಸಿಕ್ಕಾಪಟ್ಟೆ ಕಲಕಿ ಹಾಕಿತ್ತು. ಈಗ ಅದು ಕಟ್ಟಿಕೊಡಬಹುದಾದ ಚಿಂತನೆಗೆ ಕಾದಿದ್ದೇನೆ.
ನನ್ನ ಕಳೆದ ಸಿನೆಮಾ ಸಿಕ್ಕ ಖುಶಿಗಿಂತ ಹೆಚ್ಚಾಗಿ ನೀವು ಹೀಗೆ ಕರಾರುವಕ್ಕಾಗಿ ಪೂರ್ತಿ ವಿವರ ನೀಡಿದ್ದಕ್ಕೇ ಹೆಚ್ಚು ಥ್ರಿಲ್ಲಾಗಿದ್ದೇನೆ!
ನಿಮಗೆ ಈ ಚಿತ್ರದ ಡಿವಿಡಿ ಸಿಕ್ಕರೆ ದಯವಿಟ್ಟು ನನಗೂ… (ನೀವಾಗಿಯೇ ಪ್ರಾಮಿಸ್ ಮಾಡಿದ್ದೀರಿ. ಆದರೂ ಒಂದು ರಿಕ್ವೆಸ್ಟ್)

ಹ್ಯಾಟ್ಸ್ ಆಫ್!
ಮ್ಯಾಜಿಕ್ ಚಾರ್ಪೆಟ್ ಗೆ!!
ಪರಮೇಶ್ವರ ಗುರುಸ್ವಾಮಿಯವರಿಗೆ!!!
-ಚೇ… ತೀ….
ಚೇತನಾ ತೀರ್ಥಹಳ್ಳಿ
ನೀವು ಹುಡುಕುತ್ತಿರುವ ಚಿತ್ರ ‘ಭವ್ನಿ ಭವಾಯ್’ May 10, 2008
Posted by magiccaarpet in dailogue.1 comment so far
ನೀವು ಹುಡುಕುತ್ತಿರುವ ಚಿತ್ರವನ್ನ ಇದೋ ಹೆಕ್ಕಿ ಕೊಡುತ್ತಿದ್ದೇನೆ. ಅದರ ಹೆಸರು, “ಭವ್ನಿ ಭವಾಯ್”. ನಿದೇರ್ಶನ: ಕೇತನ್ ಮೆಹ್ತಾ. ೧೯೮೦ರಲ್ಲಿ ತಯರಾಗಿದ್ದು. ಪಾತ್ರವರ್ಗದಲ್ಲಿ ನನ್ನ ಇಂಡಿಯನ್ ಫೇವರಿಟ್ ಅಭಿನೇತ್ರಿ ಸ್ಮಿತಾ ಪಾಟೀಲ್, ನಾಸಿರುದ್ದಿನ್ ಷಾ, ಓಮ್ ಪುರಿ, ದೀನಾ ಪಾಠಕ್, ಮೋಹನ್ ಗೋಖಲೆ ಮುಂತಾದವರು. ಭವ್ನಿ ಭವಾಯ್ ಅಂದ್ರೆ ಜೀವಮಾನದ ನಾಟಕ ಅಂದುಕೊಳ್ಳಬಹುದು. ಕೇತನ್ ರವರ ಈ ಚಿತ್ರವನ್ನು ಹಿಂದಿಗೆ ೧೯೮೨ರಲ್ಲಿ “ಅಂದೇರ್ ನಗರಿ”(೧೩೫ ನಿಮಿಷ) ಎಂಬ ಹೆಸರಿನಲ್ಲಿ ಡಬ್ ಮಾಡಲಾಗಿದೆ. ಇದು ಕೇತನ್ ರವರ ಅರಂಗೇಟ್ರಮ್ ಚಿತ್ರ. ನ್ಯಾಷನಲ್ ಇಂಟಿಗ್ರೇಷನ್ ಗಾಗಿ ಅತ್ಯುತ್ತಮ ಫೀಚರ್ ರಾಷ್ಠ್ರೀಯ ಪ್ರಶಸ್ತಿ, ಮತ್ತೆ ಫ್ರಾನ್ಸಿನ ನಾನ್ಟೆ ಚಿತ್ರೋತ್ಸವ ಪ್ರಶಸ್ತಿಗಳನ್ನು ಗಳಿಸಿದೆ.
ಗುಜರಾತಿ ಜಾನಪದ ಕಲೆ, ಭವಾಯ್ ನೃತ್ಯ ನಾಟಕದ ಕಥೆಯನ್ನು ಯಥಾವತ್ತಾಗಿ ಚಿತ್ರ ಮಾಡಲಾಗಿದೆ. ಭವಾಯ್ ಕಲೆಯ ಹಿನ್ನೆಲೆಯೂ ಕುತೂಹಲಕಾರಿಯಾಗಿದೆ. ಅಸೈತ್ ತಾಕೂರ್ ಎಂಬ ಬ್ರಾಹ್ಮಣನೊಬ್ಬ ಜಾತಿ ಭ್ರಷ್ಠನಾಗಿ ಅಂದಿನ ಕೆಳಜಾತಿಯವರಾದ ಭಂಗಿಗಳ ಜೊತೆ ಬದುಕುತ್ತಾನೆ. ತರ್ಗಲರು ಎಂದು ಕರೆಯಲ್ಪಡುವ ಅವನ ವಂಶಸ್ಥರು ಅಂದರೆ ಕಥೆಯ ಸಂದರ್ಭದ ಅಸ್ಪೃಶ್ಯರು ಪಯಣದ ಒಂದು ರಾತ್ರಿಯ ತಂಗಿನಲ್ಲಿ ಹಾಡುವ ಕಥೆಯಿದು:
ಧೀರಜ್ ಚಂದ್ರ ಸೇನ ಎಂಬ ರಾಜನಿಗೆ ಇಬ್ಬರು ಹೆಂಡತಿಯರು. ಒಬ್ಬಳು ಗಂಡು ಮಗುವನ್ನ ಹೆತ್ತಾಗ ಇನ್ನೊಬ್ಬಳ ಮತ್ಸರ ಆ ಮಗುವಿನಿಂದ ಕೇಡು ಕಾದಿದೆ ಎಂದು ರಾಜನನ್ನು ನಂಬಿಸಿ ಅದರ ವಧೆಗೆ ರಾಜ ಆಜ್ಞೆ ಮಾಡುತ್ತಾನೆ(ಮಗು ಈಡಿಪಸ್ ತರ). ಆ ಕೆಲಸ ಮಾಡ ಬೇಕಾದವರು ಮಗುವನ್ನು ಕೊಲ್ಲದೆ ಒಂದು ಪೆಟ್ಟಿಗೆಯಲ್ಲಿಟ್ಟು ನದಿಯಲ್ಲಿ ತೇಲಿ ಬಿಡುತ್ತಾರೆ(ಮಗು ಕರ್ಣನ ತರ). ಆ ಮಗು ಕಥೆಯ ಸಂದರ್ಭದ ಅಸ್ಪೃಶ್ಯರಾದ ಭಂಗಿಗಳ ಕೈಗೆ ಸಿಕ್ಕಿ ಜೀವ್ಲ ಎಂಬ ಹೆಸರಿನಿಂದ ಬೆಳೆಯುತ್ತದೆ. ಈ ವಿಷಯ ಮತ್ಸರದ ರಾಣಿಗೆ ಗೊತ್ತಾಗಿ ರಾಜನ ಕಲ್ಯಾಣಿಯಲ್ಲಿ ನೀರು ಬರುವುದಕ್ಕೆ ೩೨ ಲಕ್ಷಣಗಳಿರುವ ಯುವಕನ ಬಲಿ ಕೊಡಬೇಕು ಎಂದು ಅರಮನೆಯ ವ್ಯವಸ್ಥೆಯ ಮೂಲಕ ನಂಬಿಸುತ್ತಾಳೆ. ಅವರ ಪ್ರಕಾರ ಬಲಿಗೆ ಸೂಕ್ತವಾದವನೇ ಜೀವ್ಲಾ.
ಆ ಕಥೆಯಲ್ಲಿ ಅಸ್ಪೃಶ್ಯರಾದ ಭಂಗಿಗಳೆಲ್ಲ ಸೊಂಟಕ್ಕೆ ಹಿಂಭಾಗದಲ್ಲಿ ಪೊರಕೆಯನ್ನು ಕಟ್ಟಿಕೊಳ್ಳ ಬೇಕು. ಏಕೆಂದರೆ ನೆಲದ ಮೇಲೆ ಮೂಡಿದ ಅವರ ಹೆಜ್ಜೆಯ ಗುರುತು ಜಾತಿ ಪದ್ಧತಿಯಲ್ಲಿ ಮೇಲ್ಜಾತಿಯವರಿಗೆ ಮೈಲಿಗೆ! ಅವರು ಹಿಂದೆ ಕಟ್ಟಿಕೊಂಡಿರುವ ಪೊರಕೆ ಗುಡಿಸಿ ಬಿಟ್ಟರೆ ಮೈಲಿಗೆ ಮಣ್ಣಿನಿಂದ ಹೋಗಿ ಬಿಡುತ್ತದೆ! ಕಥೆಯ ಸಂದರ್ಭದ ಅಸ್ಪೃಶ್ಯರೆಲ್ಲ ಜೀವ್ಲಾನ ಬಲಿಯನ್ನು ಪ್ರತಿರೋಧಿಸುತ್ತಾರೆ. ಚಿತ್ರಕ್ಕೆ ಎರಡು ಮುಕ್ತಾಯಗಳಿವೆ. ಕಥೆ ಹೇಳುತ್ತಿರುವವನ ಪ್ರಕಾರ ಅಸ್ಪೃಶ್ಯರೆಲ್ಲ ಸೇರಿ ಬಾವಿ ಅಗೆದು ದೇವರು ಪ್ರತ್ಯಕ್ಷನಾಗಿ ರಾಜನಿಗೆ ಒಬ್ಬ ಉತ್ತರಾಧಿಕಾರಿಯನ್ನ ಕರುಣಿಸುತ್ತಾನೆ. ಜೀವ್ಲಾ ಸುಖಸಂತೋಷಗಳಿಂದ ಮುಂದೆ ಬದುಕುತ್ತಾನೆ. ಇನ್ನೊಂದು ರೀತಿಯ ಮುಕ್ತಾಯವನ್ನ ಕೇಳುಗರು ಹೇಳುತ್ತಾರೆ. ಅವರ ಪ್ರಕಾರ ಜೀವ್ಲಾನ ಬಲಿಯಾಗುತ್ತದೆ. ಬಾವಿಯಿಂದ ನೀರು ಉಕ್ಕಿ ಕೇಡಿಗ ರಾಜನನ್ನು ಎಲ್ಲರನ್ನೂ ಮುಳುಗಿಸುತ್ತದೆ.
ಚಿತ್ರ ತಯಾರಾದ ಸಂದರ್ಭದ ಸಮಕಾಲೀನ ಘಟನೆಗಳಾದ ಅಹ್ಮದಾಬಾದ್ ಮತ್ತು ಉತ್ತರ ಗುಜರಾತಿನ ದಲಿತರ ಮೇಲಿನ ದೌರ್ಜನ್ಯವನ್ನೂ ಸಹ ಚಿತ್ರದಲ್ಲಿ ಸೇರಿಸಿಕೊಳ್ಳಲಾಗಿದೆ. ಸ್ವಾತಂತ್ರ ಹೋರಾಟದ ಸಾಕ್ಷ್ಯಚಿತ್ರಗಳ ತುಣುಕುಗಳನ್ನು ಸಹ ಬಳಸಿಕೊಳ್ಳಲಾಗಿದೆ.
ಇದೊಂದು ಚೊಕ್ಕವಾದ ಗುಜರಾತಿನ ಜನಪದ ಮತ್ತು ಕುಸುರಿಯನ್ನು ಮೈವೆತ್ತುಕೊಂಡಿರುವ ಚಿತ್ರ. ಸುಂದರ ಛಾಯಾಗ್ರಹಣ, ಪ್ರತಿಭಾವಂತ ನಟನಟಿಯರ ಮನಸ್ಸಿನ ಮೇಲೆ ಮುದ್ರೆಯೊತ್ತುವಂಥ ಅಭಿನಯ, ಕೇತನ್ ರವರ ನಿದೇರ್ಶನ ಎಲ್ಲ ಸೇರಿ ಒಂದು ಸಾಂದ್ರವಾದ ಅನುಭವವನ್ನು ನೀಡುತ್ತದೆ.
ನೀವು ನೆನಪಿಸಿದ್ದು ಒಳ್ಳೆಯದಾಯಿತು. ಈ ಚಿತ್ರವನ್ನು ನನ್ನ ಚಿತ್ರಸಂಗ್ರಹಕ್ಕೆ ತರಲು ಪ್ರಯತ್ನಿಸುತ್ನಿಸುತ್ತಿದ್ದನೇ. ಸಕ್ಕರೆ ನಿಮಗೂ.
ಪರಮೇಶ್ವರ ಗುರುಸ್ವಾಮಿ.
paramesvara guruswamy


