ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕನ್ನಡ ಚಿತ್ರ ಕನಸೆಂಬೋ ಕುದುರೆಯನೇರಿ ರೋಂನಲ್ಲಿ ನಡೆಯಲಿರುವ ಏಷ್ಯನ್ ಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗಿದೆ.
ಇಲ್ಲಿಯ ತನಕ ಯಾವುದೇ ಕನ್ನಡ ಚಿತ್ರವೂ ಈ ಸ್ಪರ್ಧೆಗೆ ಆಯ್ಕೆ ಯಾಗಿರಲಿಲ್ಲ. ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಯಾಗುವುದೇ ಹೆಮ್ಮೆಯ ಸಂಗತಿ, ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗುವುದಂತೂ ಮತ್ತೂ ದೊಡ್ಡ ಸಾಧನೆ. ಕನಸೆಂಬೋ ಕುದುರೆಯನೇರಿ ಈ ಎರೆಡೂ ಸಾಧನೆಗಳನ್ನು ಮಾಡಿದೆ. ಚಿತ್ರದ ವಿನೂತನ ಕಥನ ಕ್ರಮ ಹಾಗೂ ಅದರ ಕಲಾತ್ಮಕ ರೂಪ ಆಯ್ಕೆದಾರರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ರೋಂ ಚಿತ್ರೋತ್ಸವದ ಆಯೋಜಕರು ಪತ್ರ ಬರೆದಿದ್ದಾರೆ.
ನವೆಂಬರ್ ೧೨-೨೧ ರವರೆಗೆ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಭಾಗವಹಿಸಲು ನಿರ್ದೇಶಕ ಗಿರೀಶ್ ಕಾಸರವಳ್ಳಿಯವರಿಗೆ ಆಹ್ವಾನ ಬಂದಿದ್ದು, ಅವರು ನವೆಂಬರ್ ೧೮ರಂದು ರೋಂಗೆ ತೆರಳಲಿದ್ದಾರೆ.ಬಸಂತ್ ಕುಮಾರ್ ಪಾಟೀಲ್ ಮತ್ತು ಅಮೃತಾ ಪಾಟೀಲ್ ರು ನಿರ್ಮಿಸಿ, ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಈ ಚಿತ್ರ ಕನ್ನಡ ಸಾಹಿತ್ಯ ಲೋಕದಲ್ಲೊಂದು ಅಪರೂಪದ ಕೃತಿ ಎಂದು ಕರೆಯಲ್ಪಡುತ್ತಿರುವ ಅಮರೇಶ್ ನುಗಡೋಣಿಯವರ ಸವಾರಿ ಕಥೆಯನ್ನು ಆಧರಿಸಿದೆ. ಖ್ಯಾತ ಸಾಹಿತಿ ಗೋಪಾಲ ಕೃಷ್ಣ ಪೈ ಜೊತೆ ಸೇರಿ ಗಿರೀಶ್ ಕಾಸರವಳ್ಳಿಯವರು ರಚಿಸಿದ ಈ ಚಿತ್ರದ ಚಿತ್ರ ಕಥೆಗೆ ಈ ಸಾಲಿನ ಶ್ರೇಷ್ಠ ಚಿತ್ರಕತೆಗಾಗಿ ರಾಷ್ಠ್ರ ಪ್ರಶಸ್ತಿ ದೊರೆತಿತ್ತು. ಸಮಾಜದ ಅಂಚಿಗೆ ತಳ್ಳಲ್ಪಟ್ಟ ಈರ್ಯ ಮತ್ತು ಅವನ ಹೆಂಡತಿ ರುದ್ರಿಯ ಕನಸುಗಳ ಸುತ್ತ ಹೆಣೆಯಲಾದ ಕಥೆ ಇದು. ಸುಡುಗಾಡು ಸಿದ್ದನ ಹಿಂಬಾಲಕನಾದ ಈರ್ಯ ಹೆಣ ಹೂಳುವ ವ್ರೃತ್ತಿ ಮಾಡುತ್ತಿರುವವನು.
ತನ್ನ ಕಸಿನಲ್ಲಿ ಸುಡುಗಾಡು ಸಿದ್ದ ಕಾಣಿಸಿ ಕೊಂಡ ದಿನ ಊರಿನಲ್ಲಿ ಯಾರಾದರೊಬ್ಬರು ಸಾಯುತ್ತಾರೆಂದು ಅವನ ನಂಬಿಕೆ. ಎಷ್ಟೋ ಕಾಲ ನಿಜವಾಗುತ್ತಿದ್ದ ಈ ಕನಸು ಒಮ್ಮೆಲೇ ಸುಳ್ಳಾಗ ತೊಡಗಿದಾಗ ಈರ್ಯ ಆಘಾತಕ್ಕೊಳಗಾಗುತ್ತಾನೆ. ತನ್ನ ಬಗ್ಗೆಯೇ ವಿಶ್ವಾಸ ಕಳೆದು ಕೊಳ್ಳುತ್ತಾನೆ. ರುದ್ರಿಯ ಕನಸೂ ಹೀಗೆಯೇ ಸುಳ್ಳ್ಳಾಗ ತೊಡಗುತ್ತದೆ. ಒಂದೇ ಘಟನೆಯನ್ನು ಎರೆಡೆರೆಡು ಬಾರಿ ಹೇಳುವುದರ ಮೂಲಕ ಕನಸುಗಳು ಸುಳ್ಳಾಗಲು ಕಾರಣವೇನು ಎನ್ನುವುದನ್ನು ಚಿತ್ರ ಹೇಳುತ್ತದೆ. ದುರ್ಬಲರ ಕನಸುಗಳನ್ನು ಉಳ್ಳವರು ತಮ್ಮ ಕನಸಾಗಿ ಹೇಗೆ ಮಾರ್ಪಡಿಸಿ ಕೊಳ್ಳುತ್ತಾರೆ ಮತ್ತು ಅದು ತನ್ನ ಅರಿವಿಗೆ ಬಂದ ನಂತರ ಈರ್ಯ ರುದ್ರಿ ದಂಪತಿಗಳು ಹೇಗೆ ಅದಕ್ಕೆ ಪ್ರತಿಕ್ರಿಯಿಸುತ್ತಾರೆ ಎನ್ನುವುದೇ ಚಿತ್ರದ ವಸ್ತು. ಕನಸುUಳು ಆವರ್ತ ರೂಪ ದಲ್ಲಿರುತ್ತವೆ, ತುಣುಕು ತುಣುಕಾಗಿ ರೂಪ ಗೊಳ್ಳುತ್ತಿರುತ್ತವೆ. ಚಿತ್ರವೂ ಈ ರೂಪ ಶಿಲ್ಪವನ್ನೇ ಅವಲಂಬಿಸಿದೆ.
ಈರ್ಯನಾಗಿ ವೈಜನಾಥ್ ಬಿರಾದಾರ್, ರುದ್ರಿಯಗಿ ಉಮಾಶ್ರೀ ಅಭಿನಯಿಸಿದ್ದಾರೆ. ಬಿರಾದಾರ್ ಆ ಪಾತ್ರವೇ ಆಗಿದ್ದಾರೆ ಎನ್ನುವುದು ನೋಡಿದವರ ಹೇಳಿಕೆ. ಹಿರಿಯ ನಟ ಸದಾಶಿವ ಬ್ರಹ್ಮಾವರ ಒಂದು ಮುಖ್ಯ ಪಾತ್ರದಲ್ಲಿದ್ದು Uಮನ ಸೆಳೆಯುವ ಅಭಿನಯ ನೀಡಿದ್ದಾರೆ. ಇನ್ನುಳಿದ ಮುಖ್ಯ ಪಾತ್ರದಲ್ಲಿ ಶಿವರಂಜನ್, ಪವಿತ್ರಾ ಲೋಕೇಶ್, ಬೇಬಿ ಸೌಂದರ್ಯ, ಅಕ್ಕಿ ಚನ್ನ ಬಸಪ್ಪ. ಸಾವಂತ್, ಬಸವರಾಜ ಮುರುಗೋಡ್, ಪುರುಷೋತ್ತಮ ತಲವಾಟ, ಬಸವರಾಜ್ ಹಿರೇಮಠ್ ಮುಂತಾದವರು ಅಭಿನಯಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಹೆಚ್.ಎಂ.ರಾಮಚಂದ್ರರ ಛಾಯಾಗ್ರಹಣ, ವಿ.ಮನೋಹರ್ ರವರ ಸಂಗೀತ ವಿರುತ್ತದೆ. ಗಿರೀಶ್ ಕಾಸರವಳ್ಳಿಯವರ ಹೆಚ್ಚಿನ ಚಿತ್ರಗಳನ್ನು ಸಂಕಲಿಸಿದ ರಾಜ್ಯ ಪ್ರಶಸ್ತಿ ವಿಜೇತ ಸಂಕಲನಕಾರ ಎಂ.ಎನ್.ಸ್ವಾಮಿಯವರೇ ಈ ಚಿತ್ರದಲ್ಲೂ ತಮ್ಮ ಕೈ ಚಳಕ ತೋರಿಸಿದ್ದಾರೆ.
ಇತ್ತೀಚಿಗೆ ನಿಧನರಾದ ವೈಶಾಲಿ ಕಾಸರವಳ್ಳಿಯವರು ವಸ್ತ್ರ ವಿನ್ಯಾಸ ಮಾಡಿದ ಕೊನೆಯ ಚಿತ್ರವೂ ಇದಾಗಿದೆ. ಪ್ರಸನ್ನಕುಮಾರ್ ರ ನಿರ್ಮಾಣ ವಿನ್ಯಾಸ ವಿದೆ. ಇದಲ್ಲದೇ ಕನಸೆಂಬೋ ಕುದುರೆಯನೇರಿ ಚಿತ್ರವು ಈಗಾಗಲೇ ಭಾರತದ ನಾಲ್ಕು ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ.
ಗೋವಾದಲ್ಲಿ ನಡೆಯಲಿರುವ ಭಾರತದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ, ಕೊಲ್ಕತ್ತಾದಲ್ಲಿ ನಡೆಯಲಿರುವ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ, ತಿರುವನಂತಪುರಂ ನಲ್ಲಿ ನಡೆಯಲಿರುವ ಕೇರಳದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನ ಗೊಳ್ಳಲಿದೆ. ಹಾಗೂ ಮೊನ್ನೆಯಷ್ಟೇ ಮುಕ್ತಾಯ ಗೊಂಡ ಮುಂಬೈನ ಮಾಮಿ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ದಲ್ಲೂ ಈ ಚಿತ್ರ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ಡಿಸೆಂಬರ್ ವೇಳೆಗೆ ಈ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧತೆ ಮಾಡುತ್ತಿದ್ದಾರೆ. ಬಸಂತ್ ಕುಮಾರ್ ಪಾಟೀಲರು ಗಿರೀಶ್ ಕಾಸರವಳ್ಳಿ ಯವರ ನಿರ್ದೇಶನದಲ್ಲಿ ಮೂರು ಚಿತ್ರಗಳನ್ನು ನಿರ್ಮಿಸಿದ್ದು ಆ ಮೂರೂ ಚಿತ್ರಗಳು ಅಂತಾರಾಷ್ಟೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದ್ದು ಹೆಮ್ಮೆಯ ಸಂಗತಿ.
ಡಾ. ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ ನಾಯಿನೆರಳು ೧೫ ಚಿತೋತ್ಸವದಲ್ಲಿ ಭಾಗವಹಿಸಿತ್ತು. ಕರಾಚಿಯಲ್ಲಿ ನಡೆದ ಕಾರಾ ಚಿತ್ರೋತ್ಸವದಲ್ಲಿ ಪ್ರಥಮ ಪ್ರಶಸ್ತಿ ಪಡೆದಿತ್ತು. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಡೆದ ಏಕ ಮಾತ್ರ ಕನ್ನಡ ಚಿತ್ರವೂ ಇದಾಗಿದೆ.
ಖ್ಯಾತ ಸಣ್ಣ ಕತೆಗಾರ್ತಿ ವೈದೇಹಿಯವರ ಕಥೆಯೊಂದನ್ನು ಆಧರಿಸಿದ ಗುಲಾಬಿ ಟಾಕೀಸ್ ಸುಮಾರು ೨೮ ಚಿತ್ರೋತ್ಸವಗಳಲ್ಲಿ ಭಾಗಹಿಸಿದ್ದಲ್ಲದೇ ಫ಼್ರಾನ್ಸ್ ನಲ್ಲಿ, ಇಟಲಿಯಲ್ಲಿ, ಹಾಗೂ ಓಷಿಯಾನ್ಸ್ , ಮತ್ತು ಮಾಮಿ ಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನೂ ಗಳಿಸಿತ್ತು. ಇದೀಗ ಅವರ ಮೂರನೆಯ ಚಿತ್ರ ಅಂತಾರಾಷ್ಟ್ರಿಂii ಮಟ್ಟದಲ್ಲಿ ಕನ್ನಡದ ಕಂಪನ್ನು ಮೆರೆಸಲು ತನ್ನ ಸವಾರಿ ಆರಂಭಿಸಿದೆ. ಕರ್ನಾಟಕದ ರಾಜ್ಯೋತ್ಸವದ ದಿನದಂದು ಈ ಸುದ್ದಿ ಕನ್ನಡಿಗರಿಗೆ ತಿಳಿಸಲು ಬಸಂತ್ ಪ್ರೊಡಕ್ಷನ್ಸ್ ಹರ್ಷಿಸುತ್ತದೆ.



Posted by ಏಷ್ಯನ್ ಚಿತ್ರೋತ್ಸವದಲ್ಲಿ ‘ ಕನಸೆಂಬೋ ಕುದುರೆಯನೇರಿ ‘… « ದೇವನೂರು on November 2, 2010 at 10:24 am
[...] ಸಂಪೂರ್ಣ ಮಾಹಿತಿಗೆ : ಮ್ಯಾಜಿಕ್ ಕಾರ್ಪೆಟ್ [...]